ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಪಕ್ಷವು ಕರ್ನಾಟಕದ ಜನತೆಗೆ 5 ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಪಕ್ಷ ಗೆದ್ದರೆ ಜಾರಿಗೆ ತರುವುದಾಗಿ ಹೇಳಿತ್ತು. ಅಂತಿಮವಾಗಿ ಎರಡು ತಿಂಗಳಿಂದ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಮಾನ್ಯ ಮುಖ್ಯಮಂತ್ರಿಗಳು ಈ ಐದು ಗ್ಯಾರಂಟಿ ಕಾರ್ಡ್ ಯೋಜನೆಗಳ ಜಾರಿಗೆ ಶ್ರಮಿಸುತ್ತಿದ್ದಾರೆ.
ಈಗಾಗಲೇ ಶಕ್ತಿ ಯೋಜನೆ ಸೌಲಭ್ಯ ಮಹಿಳೆಯರಿಗೆ ಸಿಗುತ್ತಿದ್ದು ಗೃಹಜ್ಯೋತಿ ಯೋಜನೆಗೂ ಕೂಡ ಅರ್ಜಿ ಆಹ್ವಾನ ಮಾಡಲಾಗುತ್ತಿದೆ. ಅಂತೆಯೇ ಜುಲೈ ತಿಂಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ 10 ಕೆಜಿ ಅಕ್ಕಿಯನ್ನು ನೀಡುವುದಾಗಿ ಕೂಡ ಭರವಸೆ ನೀಡಿದ್ದರು ಗ್ಯಾರಂಟಿ ಕಾರ್ಡ್ ಯೋಜನೆಗಳ ಪೈಕಿ ಇದು ಕೂಡ ಮಹತ್ವದ್ದಾಗಿತ್ತು.
ಜೂನ್ ತಿಂಗಳಿನಲ್ಲಿ ಜಾರಿಗೆ ಬರಬೇಕಾಗಿದ್ದರೂ ದಾಸ್ತಾನು ಕೊರತೆಯಿಂದ ಎನ್ನುವ ಕಾರಣ ಕೊಟ್ಟು ಧಾನ್ಯ ಸಂಗ್ರಹಕ್ಕೆ ಸಮಯ ಕೇಳಿ ಜುಲೈ ತಿಂಗಳಿಂದ ಕಡಾಖಂಡಿತವಾಗಿ ಜಾರಿಗೆ ತರುತ್ತೇವೆ ಎಂದು ಮಾತು ಕೊಟ್ಟಿದ್ದರು. ಇದರ ಸಂಬಂಧಿತವಾಗಿ ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಅವರು ಮತ್ತು ಆಹಾರ ಹಾಗೂ ನಾಗರಿಕ ಸರಬರಾಜು ಸಚಿವರಾದ ಕೆ.ಎಚ್ ಮುನಿಯಪ್ಪ ಅವರು ಸಹ ಕೇಂದ್ರಕ್ಕೆ ಮನವಿಯನ್ನು ಸಲ್ಲಿಸಿದ್ದರು.
ದೆಹಲಿಗೂ ಸಹ ಅನೇಕ ಬಾರಿ ಪ್ರಯಾಣ ಬೆಳೆಸಿ ನೆರವು ಕೇಳಿದ್ದರು. ಆದರೆ ಈ ಪ್ರಯತ್ನ ಕೈಗೂಡಲಿಲ್ಲ ಹಾಗಾಗಿ ಕೇಂದ್ರ ಸರ್ಕಾರದಿಂದ ಎಲ್ಲ ರಾಜ್ಯಗಳಿಗೂ ಸಿಗುವಂತೆ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ 5Kg ಅಕ್ಕಿ ಮಾತ್ರ ಅನ್ನಭಾಗ್ಯ ಯೋಜನೆಯಡಿ ದೊರೆಯಲಿದೆ. ಕಾಂಗ್ರೆಸ್ ಪಕ್ಷವು ಹೆಚ್ಚುವರಿಯಾಗಿ ನೀಡಬೇಕಾಗಿದ್ದ ಅಕ್ಕಿಯ ಬದಲು ಹಣ ನೀಡಲು ನಿರ್ಧಾರಕ್ಕೆ ಬಂದಿದೆ.
ಇಂದು ನಡೆದ ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ ಇದೀಗ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರೇ ಈ ಬಗ್ಗೆ ಟ್ವೀಟ್ ಮಾಡಿ ರಾಜ್ಯದ ಜನತೆಗೆ ಮಾಹಿತಿ ತಿಳಿಸಿದ್ದಾರೆ. ನಾಡಿನ ಜನತೆಗೆ ಚುನಾವಣೆ ಪೂರ್ವವಾಗಿ ನಾವು ನೀಡಿದ್ದ ಭರವಸೆಯಂತೆ ಬಡ ಕುಟುಂಬಗಳ ಪ್ರತಿ ವ್ಯಕ್ತಿಗೆ ತಲಾ 10Kg ಅಕ್ಕಿಯನ್ನು ನೀಡಲು ಶಕ್ತಿ ಮೀರಿ ಪ್ರಯತ್ನ ಮಾಡಿದ್ದೇವೆ.
ಆದರೆ BJP ಅವರ ಕುತಂತ್ರ ನೀತಿಯಿಂದಾಗಿ FCI ಅವರು ರಾಜ್ಯಕ್ಕೆ ಅಕ್ಕಿ ನೀಡಲು ನಿರಾಕರಿಸಿದರು. ಆನಂತರ ತೆಲಂಗಾಣ, ಆಂಧ್ರಪ್ರದೇಶ, ಪಂಜಾಬ್ ಮುಂತಾದ ರಾಜ್ಯಗಳನ್ನು ಸಂಪರ್ಕಿಸಿ ಅಕ್ಕಿಯನ್ನು ಖರೀದಿಸಲು ನಾವು ನಡೆಸಿದ ಪ್ರಯತ್ನ ಕೈಗೂಡಲಿಲ್ಲ. ಹಾಗಾಗಿ ಜುಲೈ 1 ರಿಂದ 5Kg ಅಕ್ಕಿ ಮಾತ್ರ ರಾಜ್ಯದ ಜನತೆಗೆ ಸಿಗಲಿದೆ. ಉಳಿದ ಹೆಚ್ಚುವರಿ 5Kg ಅಕ್ಕಿ ಬದಲಿಗೆ ಹಣವನ್ನೇ ನೀಡಲು ನಿರ್ಧರಿಸಿದ್ದೇವೆ.
ಈ ಹಣದಲ್ಲಿ ಫಲಾನುಭವಿಗಳು ತಮ್ಮ ಕುಟುಂಬಕ್ಕೆ ಬೇಕಾಗಿರುವ ಆಹಾರ ಧಾನ್ಯವನ್ನು ಖರೀದಿಸಬಹುದಾಗಿದೆ ಎಂದು ತಿಳಿಸಿದ್ದಾರೆ. ಸಚಿವ ಸಂಪುಟ ಸಭೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್ ಮುನಿಯಪ್ಪ ಅವರು ಸಹ ಇದೇ ಮಾತನಾಡಿ ಕೇಂದ್ರಕ್ಕೆ ಒಂದು Kg ಅಕ್ಕಿಗೆ 34 ರೂಪಾಯಿಯಂತೆ ಹಣ ಕೊಟ್ಟು ಖರೀದಿಸಲು ಮುಂದಾಗಿದ್ದೆವು.
ಆದರೆ ಅದು ಸಾಧ್ಯವಾಗಲಿಲ್ಲ ಹಾಗಾಗಿ ಫಲಾನುಭವಿಗಳಿಗೆ ಹಣವನ್ನು ಜಮೆ ಮಾಡುತ್ತಿದ್ದೇವೆ. ಕುಟುಂಬದ ಯಜಮಾನನ ಖಾತೆಗೆ ಒಬ್ಬ ಸದಸ್ಯರಿಗೆ 170 ರೂಪಾಯಿಯಂತೆ ಕುಟುಂಬದಲ್ಲಿ ಎಷ್ಟು ಸದಸ್ಯರಿದ್ದಾರೆ, ಅದರ ಆಧಾರದ ಮೇಲೆ ಹಣ ಜಮೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ. ಆದರೆ ಯಾವ ರೀತಿ ಅರ್ಜಿ ಸಲ್ಲಿಸಿ ನೋಂದಣಿ ಆಗುವುದರ ಬಗ್ಗೆ ಸ್ಪಷ್ಟ ಮಾಹಿತಿ ದೊರೆತಿಲ್ಲ, ಪ್ರತ್ಯೇಕ ಆದೇಶ ಪತ್ರದಲ್ಲಿ ತಿಳಿಸುವ ಸಾಧ್ಯತೆ ಇದೆ ಅಲ್ಲಿಯವರೆಗೂ ಕಾಯೋಣ.