ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಸರ್ಕಾರ ಇನ್ಮುಂದೆ ಮನೆ ಬಾಗಲಿಗೆ ಬರಲಿದೆ ಜನನ-ಮರಣ ಪ್ರಮಾಣ ಪತ್ರ

 

WhatsApp Group Join Now
Telegram Group Join Now

ಜನನ ಮರಣ ಪ್ರಮಾಣಪತ್ರಗಳನ್ನು ಅರ್ಜಿದಾರರ ಮನೆ ಬಾಗಿಲಿಗೆ ತಲುಪಿಸುವ ವಿಶಿಷ್ಠ ಯೋಜನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಚಾಲನೆ ನೀಡಿದರು.

ದೈನಂದಿನ ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಜನನ ಮತ್ತು ಮರಣವನ್ನು ದೃಢೀಕರಿಸುವ ದಾಖಲೆ ಅತ್ಯಂತ ಅಗತ್ಯವಾಗಿದ್ದು, ವ್ಯಕ್ತಿಯು ತನ್ನ ವಿದ್ಯಾಭ್ಯಾಸ, ಉದ್ಯೋಗ ಸೇರಿದಂತೆ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿಯೂ ಯಾವುದೇ ಶೈಕ್ಷಣಿಕ ಸಾಮಾಜಿಕ ಮತ್ತು ಅರ್ಥಿಕ ವಹಿವಾಟುಗಳನ್ನು ನಡೆಸಲು ಜೀವಂತವಿರುವಾಗಲೂ ಮತ್ತು ಮರಣದ ನಂತರ ಆತನ ಕುಟುಂಬಕ್ಕೂ ಇದು ಅವಶ್ಯಕವಾಗಿದೆ.

ಉಡುಪಿ ಜಿಲ್ಲೆಯು ಆರೋಗ್ಯ ಕ್ಷೇತ್ರದಲ್ಲಿ ಪ್ರಮುಖ ಹಬ್ ಆಗಿ ಗುರುತಿಸಿಕೊಂಡಿದೆ. ಇಲ್ಲಿನ ಮಣಿಪಾಲ ಆಸ್ಪತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಹೊರ ರಾಜ್ಯದ ರೋಗಿಗೂ ಸಹ ಚಿಕಿತ್ಸೆಗೆ ಆಗಮಿಸುತ್ತಿದ್ದು, ಈ ಆಸ್ಪತ್ರೆಯಲ್ಲಿ ನೂರಾರು ಮಕ್ಕಳ ಜನನ ಮತ್ತು ರೋಗ ಉಲ್ಬಣಗೊಂಡು ಅಂತಿಮ ಹಂತದಲ್ಲಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳು ವೈದ್ಯರ ಸತತ ಶ್ರಮದ ನಂತರವೂ ಚಿಕಿತ್ಸೆ ಫಲಕಾರಿಯಾಗದೇ ಮರಣಗಳು ಸಂಭವಿಸುತ್ತವೆ.

ಹೊರ ಜಿಲ್ಲೆ ಮತ್ತು ರಾಜ್ಯದಿಂದ ಆಗಮಿಸಿದ ವ್ಯಕ್ತಿ ಮರಣಹೊಂದಿದ ನಂತರ ವ್ಯಕ್ತಿಯ ಕುಟುಂಬಕ್ಕೆ ಮುಂದಿನ ಚಟುವಟಿಕೆಗಳನ್ನು ಕೈಗೊಳ್ಳಲು ಮರಣಪ್ರಮಾಣ ಪತ್ರವು ಅತ್ಯಂತ ಅಗತ್ಯವಾಗಿದ್ದು, ಹಲವು ಸಂದರ್ಭದಲ್ಲಿ ಸಂಬಂಧಿಸಿದ ಸ್ಥಳೀಯ ಜನನ ಮರಣ ನೊಂದಣಿ ಪ್ರಾಧಿಕಾರಕ್ಕೆ ಪ್ರಮಾಣ ಪತ್ರ ಕೋರಿ ಅಂದೇ ಅರ್ಜಿ ಸಲ್ಲಿಸಿದರೂ ಸಹ ತಾಂತ್ರಿಕ ಕಾರಣಗಳಿಂದ ಪ್ರಮಾಣಪತ್ರ ಪಡೆಯಲು ಸಾಧ್ಯವಾಗುವುದಿಲ್ಲ ಮತ್ತು ಅದೇ ಉದ್ದೇಶಕ್ಕೆ ವ್ಯಕ್ತಿಯ ಮರಣದ ದು:ಖದ ನಡುವೆ ಉಡುಪಿ ಜಿಲ್ಲೆಗೆ ಪುನ: ಸಾವಿರಾರು ರೂಗಳನ್ನು ಖರ್ಚು ಮಾಡಿಕೊಂಡು ಬರಬೇಕಾಗುತ್ತದೆ.

ಈ ಸಮಸ್ಯೆಯನ್ನು ಮನಗಂಡ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅವರು ವಿಶೇಷ ಮುತುವರ್ಜಿ ವಹಿಸಿ ಉಡುಪಿ ನಗರಸಭೆ ಮತ್ತು ಅಂಚೆ ಇಲಾಖೆಯ ಮೂಲಕ , ಉಡುಪಿ ಜಿಲ್ಲೆಯ ಮಣಿಪಾಲ ಸೇರಿದಂತೆ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮರಣಹೊಂದಿದ ಮತ್ತು ಜಿಲ್ಲೆಯಲ್ಲಿ ಇತರೇ ಕಾರಣಗಳಿಂದ ಮರಣ ಹೊಂದಿದ ಹೊರ ಜಿಲ್ಲೆ ಮತ್ತು ಹೊರ ರಾಜ್ಯದ ವ್ಯಕ್ತಿಗಳ ಕುಟುಂಬದ ಮನೆ ಬಾಗಲಿಗೆ ಮರಣ ಪ್ರಮಾಣಪತ್ರವನ್ನು ಅಂಚೆ ಮೂಲಕ ತಲುಪಿಸುವ ನಾಗರೀಕ ಸ್ನೇಹಿ ವಿಶಿಷ್ಠ ವ್ಯವಸ್ಥೆ ಜಾರಿಗೊಳಿಸಲಾಗಿದೆ.

ಮೃತ ವ್ಯಕ್ತಿಯ ಕುಟುಂಬದವರು ಮರಣಪ್ರಮಾಣ ಪತ್ರ ಕೋರಿ ಸಂಬಂಧಿಸಿದ ದಾಖಲೆಗಳೊಂದಿಗೆ ಅರ್ಜಿ ನಮೂನೆಯಲ್ಲಿ ಅಂಚೆ ಮೂಲಕ ಕಳುಹಿಸುವ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಂಡಲ್ಲಿ ಇದಕ್ಕಾಗಿ ನಿಗಧಿಪಡಿಸಿರುವ ಶುಲ್ಕ ರೂ.80 ನ್ನು ಪಾವತಿ ಮಾಡಿದರೆ ಸಾಕು. ಕರ್ನಾಟಕ ರಾಜ್ಯ ಸೇರಿದಂತೆ ದೇಶದ ಯಾವುದೇ ಮೂಲೆಯಲ್ಲಿರುವ ಮೃತರ ಕುಟುಂಬಕ್ಕೆ ಸ್ಪೀಡ್ ಪೋಸ್ಟ್ ಮೂಲಕ ಪ್ರಮಾಣಪತ್ರವನ್ನು ತಲುಪಿಸಲಾಗುವುದು.

ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಉಡುಪಿ ನಗರದ ಸ್ಥಳೀಯ ಜನನ ಮರಣ ನೊಂದಣಿ ಪ್ರಾಧಿಕಾರವಾದ ಉಡುಪಿ ನಗರಸಭೆ ಮತ್ತು ಅಂಚೆ ಇಲಾಖೆಗಳು ಈ ಸೇವೆ ಒದಗಿಸಲು ಪರಸ್ಪರ ಒಪ್ಪಂದ(ಎಂ.ಓ.ಯು.) ಮಾಡಿಕೊಂಡಿದ್ದು, ನಗರಸಭೆಯಿಂದ ದಾಖಲೆಗಳನ್ನು ಸಂಗ್ರಹಿಸಲು ಅಂಚೆ ಇಲಾಖೆಯಿಂದ ಇದಕ್ಕಾಗಿಯೇ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಲಾಗಿದೆ. ಈ ಮೂಲಕ ಮೃತ ವ್ಯಕ್ತಿಯ ಕುಟುಂಬದವರು ನೋವಿನ ನಡುವೆ ದಾಖಲೆಗಾಗಿ ಕಚೇರಿಗೆ ಅಲೆದಾಡದೇ ಮನೆ ಬಾಗಿಲಿನಲ್ಲಿಯೇ ಸೇವೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಜಿಲ್ಲೆಗೆ ವೈದ್ಯಕೀಯ ಚಿಕಿತ್ಸೆ ಉದ್ಯೋಗ ಸೇರಿದಂತೆ ಹಲವು ಕಾರಣಗಳಿಗೆ ಸಾವಿರಾರು ಮಂದಿ ವಲಸಿಗರು ಆಗಮಿಸುತ್ತಿದ್ದು, ವಿವಿಧ ಕಾರಣಗಳಿಂದ ಮೃತಪಟ್ಟ ವ್ಯಕ್ತಿಗಳ ಮರಣಪ್ರಮಾಣಪತ್ರವನ್ನು ಸಕಾಲದಲ್ಲಿ ಪಡೆಯಲು ತೊಂದರೆಯಾಗುತ್ತಿದ್ದ ಕಾರಣ ನಗರಸಭೆ ಮತ್ತು ಅಂಚೆ ಇಲಾಖೆ ಮೂಲಕ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದು, ಕಳೆದ 10 ದಿನದಲ್ಲಿ 100 ಕ್ಕೂ ಅಧಿಕ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಸಂಬಂದಿಸಿದವರಿಗೆ ಯಶಸ್ವಿಯಾಗಿ ಅವರ ಮನೆ ಬಾಗಿಲಿಗೆ ತಲುಪಿಸಲಾಗಿದ್ದು, ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲೂ ಇದನ್ನು ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now